Friday 4 November 2011

ಉಫ್... ಕೋಪ ಮಾಡ್ಕೋಬೇಡಿ, ಒಂದ್ನಿಮಿಷ!

ನನ್ನ ನಿರೀಕ್ಷೆಯಂತೆ ಪತ್ರಿಕೋದ್ಯಮ ಕ್ಷೇತ್ರ ಬಿಡೋಣಾಂತ ಅನಿಸ್ತಿದೆ ಲೇಖನಕ್ಕೆ ಎರಡು 3 'ಕರೆ'ಗಳು ಬಂದಿತ್ತು. ಇನ್ನೆಷ್ಟು ಕರೆಗಳು ಬರುತ್ತೋ ಅಂತ ಗೊತ್ತಿಲ್ಲ. ಚಾತಕ ಪಕ್ಷಿಯಂತೆ ಅದೆಲ್ಲದಕ್ಕೂ ಕಾದು ಕುಳಿತಿದ್ದೇನೆ. ಆ ಮೊದಲು ಅವುಗಳೆಲ್ಲದಕ್ಕೂ ಉತ್ತರಿಸಲು ಇದೊಂದು ಸಣ್ಣ ಪ್ರಯತ್ನ. ಜೊತೆಗೆ ನಾನು ಬಿಡುತ್ತಿರುವುದಕ್ಕೆ ಇವರಿಗೇಕಪ್ಪ ತಲೆಬಿಸಿ ಅಂತಾನೂ ಅನಿಸ್ತಿದೆ! ಇರಲಿ ಇರಲಿ.

ಆ ಕೆಲವು ಪ್ರಶ್ನೆಗಳು ಹೀಗಿತ್ತು.

1) ಇರ್ಷಾದ್ ಥಿಂಕ್ ಬಿಫೋರ್ ಇಂಕ್...

2) ನೀವು ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ನೀವು ಮಿಸ್ ಗೈಡ್ ಮಾಡುತ್ತಿದ್ದೀರಿ. ಎಷ್ಟೋ ಜನ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ನೀವು ಬೇಸರಪಡಿಸುತ್ತಿದ್ದೀರಿ.

3) ನೀವು ಉಲ್ಲೇಖಿಸಿರುವ ಮಾಧ್ಯಮದಲ್ಲಿರುವವರೆಲ್ಲಾ ಹಾಗೆ ಎಂದು ಹೇಳಿದ್ದೀರಿ.

4) 'ಆ' ಮಾಧ್ಯಮದಲ್ಲಿರುವವರೆಲ್ಲಾ ಬಕೆಟ್ ಹಿಡಿಯುವವರಾ?

ಹೀಗೆ ಬಹಳಾ ಬಹಳಾ ಪ್ರಶ್ನೆಗಳು. ಅವೆಲ್ಲದಕ್ಕೂ ನನ್ನ ಉತ್ತರ ಇಲ್ಲಿದೆ. ನಾನು ಮೊನ್ನೆ ಬರೆದ ಲೇಖನವನ್ನು ಎಂದೋ ಬರಿಬೇಕು ಎಂದುಕೊಂಡಿದ್ದೆ. ಆದರೆ ಎಲ್ಲದಕ್ಕೂ ಒಂದು ಸಮಯ ಬೇಕಲ್ಲ. ಆ 'ಸಮಯ' ಈಗ ಬಂತು. 'ಥಿಂಕ್ ಬಿಫೋರ್ ಇಂಕ್' ಮಾತು ಯಾವತ್ತಿದ್ದರೂ ಫೇಮಸ್ಸೇ. ಏಕೆಂದರೆ ಲೇಖನಿ ಖಡ್ಗಕ್ಕಿಂತ ಹರಿತವಾದುದು ಎಂಬ ಪಂಚ್ ಲೈನ್ ಇಟ್ಕೊಂಡೇ 'ಇಂಚರ' ಮುದ್ರಿತ ಪ್ರಾಯೋಗಿಕ ಪತ್ರಿಕೆ ಮಾಡಿದವನು ನಾನು. ಲೇಖನಿ ಖಡ್ಗಕ್ಕಿಂತ ಹರಿತವಾದುದು ತಿಳಿಯುವುದು ಇಂಕ್ ಹಿಡ್ಕೊಂಡು ಥಿಂಕ್ ಮಾಡಿದಾಗಲೇ. ಎಲ್ಲರೂ ಇಂಕ್ ಹಿಡ್ಕೊಳ್ಳುವ ಮೊದಲೇ ಥಿಂಕ್ ಮಾಡಿದರೆ ಪರ್ತಕರ್ತನಿಗೂ ಇನ್ಯಾರೋ ಬರಹಗಾನಿಗೆ ಏನು ವ್ಯತ್ಯಾಸ ಸ್ವಾಮಿ?

ಎರಡನೇ ಪ್ರಶ್ನೆಗೆ ಬರುತ್ತೇನೆ. ನನ್ನ ಲೇಖನದಿಂದ ಯಾವ ಪತ್ರಿಕೋದ್ಯಮ ವಿದ್ಯಾರ್ಥಿಯ ಆಸೆಗೂ ಭಂಗ ತರುವ ನಿರಾಶೆ ಮಾಡುವ ಮನಸ್ಸು ನನಗಿಲ್ಲ. ನನ್ನ ಮನಸ್ಸಿನಲ್ಲಿ ಇದ್ದ ಉದ್ದೇಶ ಕೆಲವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು. ಬಹುಷಃ ಆತ್ಮಾವಲೋಕನ ಮಾಡಿಕೊಳ್ಳುವವರು ಮಾಡಿದ್ದಾರೆ. ನನಗದೇ ಸಾಕು. ನನ್ನ ಮೂಲ ಲೇಖನವನ್ನು ಪೂರ್ತಿಯಾಗಿ ಓದಿದ್ದರೆ 'ಕರೆ' ಬರೆತ್ತಲೇ ಇರಲಿಲ್ಲವೇನೋ! ಇವತ್ತಿಗೂ ಅಷ್ಟೇ ನಾನು ಹಲವು ಪತ್ರಿಕೋದ್ಯಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶ ಸಿಗುತ್ತದೆ. ಅವರ ಜೊತೆ ಮಾತನಾಡಲೂ ವೇದಿಕೆ ಕಲ್ಪಿಸಿ ಕೊಡುತ್ತಾರೆ. ನಾನು ಅಲ್ಲಿ ಮಾತು ಮುಗಿಸಿದ ಬಳಿಕ ಬೇರೆ ಕ್ಷೇತ್ರಕ್ಕೆ ಹೋಗುತ್ತೇನೆ ಎನ್ನುವ ಒಬ್ಬನಾದರೂ ವಿದ್ಯಾರ್ಥಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳುವ ಮಟ್ಟಿಗಿನ ಪ್ರತಿಕ್ರಿಯೆ ಸಿಗುತ್ತಿದೆ.

3 -4ನೇ ಪ್ರಶ್ನೆಯಂತೂ ನನಗೆ ನಗು ತರುತ್ತಿದೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿ ನೋಡಿಕೊಂಡನಂತೆ ಎಂದು ಹೇಳುವ ಪ್ರಯತ್ನ ಖಂಡಿತಾ ಬೇಡ. ಇತ್ತೀಚಿಗೆ ವಿಮ್ಸ್ ಅವ್ಯವಹಾರವನ್ನು ಭೇದಿಸಿದವರು ನನಗೆ ಆದರ್ಶ ಪತ್ರಿಕೋದ್ಯಮ ಕಲಿಸಿಕೊಟ್ಟವರು. ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಕಟ್ಟು ಬೀಳುವ ಮೊದಲು ನಾಲೆಜ್ ಇಂಪ್ರೂವ್ ಮಾಡ್ಕೋ ಎಂದು ಹೇಳಿದ ರಂಗ ಸರ್ ಇವತ್ತಿಗೂ ನನಗೆ ನೆನಪಾಗುತ್ತಾರೆ. ಜಂಪಿಂಗ್ ಜರ್ನಲಿಸ್ಟ್ ಆಗಬೇಡ ಎಂದಿದ್ದ ರವಿ ಅವರನ್ನು ಮರೆಯಲು ಸಾಧ್ಯವೇ? ಬೆಂಗಳೂರು ಟೂ ಗೋವಾ ಬುಲೆಟ್ ಓಡಿಸಿ ನನಗೆ ಬುಲೆಟ್ ಹುಚ್ಚು ಹಿಡಿಸಿದ, ತನಿಖಾ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ತೆರೆದಿಟ್ಟವರನ್ನು ನಾನು ಕರೆ ಮಾಡಿದವರ ಹಾಗೆ 'ಹಾಗೆ' ಎಂದು ಹೇಳುವ ಮನುಷ್ಯ ನಾನಲ್ಲ. ಬಹುಷಃ ನಾನು ಹೇಳಿದ ನಿಮ್ಮ 'ಹಾಗೆ' ಯಾರು ಎಂಬುದು ನಿಮಗೂ ಅರ್ಥವಾದೀತು. ರಿಯಾಲಿಟೀ ಶೋ ಬಗ್ಗೆ ನಾನು ಮಾತಾಡಲ್ಲ. ವಿಚಾರದಲ್ಲಿ ನನ್ನ ನಿರೀಕ್ಷೆಯ ನಾಳೆ ಬರುವುದಿಲ್ಲ ಅಂತಾನೂ ನನಗೆ ಗೊತ್ತಿದೆ. ಅದು ಬರದೇ ಇರಲಿ. ಅಷ್ಟೇ.

ಇಷ್ಟು ಹೇಳಿ ಮುಗಿಸಬಹುದಿತ್ತು. ನಾನು ಮುಗಿಸುತ್ತಿಲ್ಲ. ಏಕೆಂದರೆ ನನ್ನ ಲೇಖನ ಹಿಂದಿನದಲ್ಲೇ ಮುಗಿದಿತ್ತು. ಮತ್ತೆ ಕೆದಕಿದವರು ನೀವೆ. ನಾನು ಮುಂದುವರೆಸುತ್ತೇನೆ. ನಾವು ಆದರ್ಶ ಪತ್ರಕರ್ತರು, ಅವರ ಹಾಗೆ ನಾನಾಗಬೇಕು ಎಂದೆಲ್ಲಾ ಹೇಳಿಕೊಂಡು ಬೆಳೆದವರು. ಆದರೆ ಅದೇ ಪರ್ತಕರ್ತರ ಹೆಸರು ಭೃಷ್ಟ ಪರ್ತಕರ್ತರ ಪಟ್ಟಿಯಲ್ಲಿ ಟಾಪ್ನಲ್ಲಿರುವಾಗ ನಮಗಾಗುವ ಅವಮಾನ ಎಂತಹುದು? ಮನೆಯ ಯಜಮಾನಾನೇ ಕಳ್ಳತನ ಮಾಡಬೇಡಿ ಎಂದು ಹೇಳಿ ನಾಳೆ ನಾಲ್ಕು ಜನರ ಮುಂದೆ ಕಳ್ಳತನ ಕೇಸ್ನಲ್ಲಿ ಸಿಕ್ಕಿಬಿದ್ದರೆ ಕುಟುಂಬ ಸದಸ್ಯ ಪಡುವ ಸಂಕಟ ನನ್ನ ಪಾಲಿನದಾಗಿತ್ತು. ಅದಕ್ಕಿಂತ ಹಿಂದೆ ನಾಲ್ಕು ಜನರ ಮುಂದೆ ಅವರನ್ನು ಹೊಗಳಿದ ನನಗೆ ಅವರು ಮುಖಕ್ಕೆ ಉಗುಳಿದಾಗ ಆದ ಅವಮಾನ ಸಹಿಸಲಸಾಧ್ಯ. ಅದಕ್ಕೆ ನನ್ನಷ್ಟಕ್ಕೆ ನಾನು ಹೇಳಿಕೊಂಡಿದ್ದು ಪತ್ರಿಕೋದ್ಯಮ ಕ್ಷೇತ್ರ ಬಿಡೋಣಾಂತ ಅನಿಸ್ತಿದೆ ಎಂದು. ಅರ್ಥವಾಯಿತು ತಾನೆ. ಪತ್ರಿಕೋದ್ಯಮ ಕ್ಷೇತ್ರ ಬಿಟ್ಟು ಹೋಗುವ ಹೇಡಿ ನಾನಲ್ಲ. ನನ್ನಲ್ಲಿ ನಿರೀಕ್ಷೆ ಇಟ್ಟಿರುವವರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತೇನೆ. ಮತ್ತೆ ಯಾರದೋ ಕರೆ ಬರುತ್ತಿದೆ! ಉತ್ತರಿಸಲು ಹೋಗುತ್ತಿದ್ದೇನೆ:)

Wednesday 2 November 2011

ಪತ್ರಿಕೋದ್ಯಮ ಕ್ಷೇತ್ರ ಬಿಡೋಣಾಂತ ಅನಿಸ್ತಿದೆ...!


ಬಹಳ ಬೇಸರದಿಂದ ಮಾತನ್ನು ಹೇಳುತ್ತಿದ್ದೇನೆ. ನನಗಿನ್ನೂ ನನ್ನ ಪ್ರೌಢ ಶಿಕ್ಷಣದ ದಿನಗಳು ನೆನಪಾಗುತ್ತವೆ. ನನ್ನ ಒಬ್ಬ ಪರ್ತಕರ್ತ ಸ್ನೇಹಿತನನ್ನು ಮೆಚ್ಚಿಕೊಂಡು ಬದುಕಿನಲ್ಲಿ ಏನಾದರೂ ಮಾಡಬೇಕೂಂತ ಮರುದಿನವೇ ನಾನೊಬ್ಬ ಪರ್ತಕರ್ತನಾಗುತ್ತೇನೆ ಎಂಬ ನಿರ್ಣಯ ಮಾಡಿದವನು ನಾನು. ಅಪ್ಪ ಅಮ್ಮನ ಬೈಗುಳಗಳ ಸುರಿಮಳೆ ಸಹಿಸಿಕೊಂಡು ಎಸ್ ಎಸ್ ಎಲ್ ಸಿ ಬಳಿಕ ಸೈನ್ಸ್ ತೆಗೆದುಕೊಳ್ಳುವ ಅರ್ಹತೆ ಇದ್ದರೂ ಆರ್ಟ್ಸ್ ತೆಗೆದುಕೊಂಡೆ. ಬರವಣಿಗೆಯನ್ನೂ ಶುರು ಹಚ್ಚಿಕೊಂಡಿದ್ದೆ ಪ್ರಜವಾಣಿಯ ಮುಖಾಂತರ.

ಪದವಿಗೆ ಬಂದಾಗ ಬರವಣಿಗೆಯ ಹಸಿವು ಹೆಚ್ಚಾಯಿತು. ನನ್ನ ಹೆಸರು ಎಲ್ಲೋ ಓದಿದ್ದೇನೆ ಎಂಬ ಪ್ರತಿಕ್ರಿಯೆ ಕಂಡವರಿಂದ ಬರುವ ಮಟ್ಟಿಗೆ ನನ್ನ ಗುರುತು ಸಿಕ್ಕಿತ್ತು. ನನ್ನ ಪತ್ರಿಕೋದ್ಯಮದ ತುಡಿತವೂ ಹೆಚ್ಚಾಯಿತು. ರಜೆ ದಿನವೂ ಫೀಲ್ಡ್ ಗಿಳಿಯುತ್ತಿದ್ದೆ. ನನ್ನ ಕ್ಯಾಮರಾ ಹಿಡಿದುಕೊಂಡು ಬೈಕ್ ಏರಿ ಹೊರಟೆನೆಂದರೆ ಹೊತ್ತು - ಊಟ ಯಾವುದರ ಪರಿವೆ ಇಲ್ಲದೆ ಸಮಾಜದ ಜೊತೆ ಬೆರೀತಿದ್ದೆ. ಸ್ಪೆಷಲ್ ಫೀಚರ್ ಸ್ಟೋರಿಗಳನ್ನು ಮಾಡುತ್ತಿದ್ದೆ. ಮಾನವೀಯ ದೃಷ್ಟಿಯಲ್ಲಿ ಹಲವರ ನೋವಿಗೆ ಕಿವಿಯಾಗುತ್ತಿದ್ದೆ. ಪದವಿಯ ದಿನದಲ್ಲೇ ನನ್ನ ಕಿರಿಯ ವಿದ್ಯಾರ್ಥಿ ಗಳಿಗೆ ಬರವಣಿಗೆ - ಪತ್ರಿಕೋದ್ಯಮ - ಛಾಯಾಗ್ರಹಣ ಕುರಿತಾದ ಪಾಠ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ನಾನು ಸುವರ್ಣಾವಕಾಶ ಎಂದು ಸ್ಟೂಡೆಂಟ್ ರಿಪೋರ್ಟರ್ ಆಗಿ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶಿದ್ದೆ.

ಪತ್ರಿಕೋದ್ಯಮ ಎಂದರೆ ಏನು ಎಂದು ನನಗೆ 99% ತಿಳಿದದ್ದು ಅಲ್ಲೇ. ಇಂಥಾ ಕಚ್ಡಾ ಕ್ಷೇತ್ರಕ್ಕೆ ನಾನು ಬಂದೆನಾ ಎಂಬ ಪಾಪ ಪ್ರಜ್ಞೆ ಕಾಡಿದ ಮೊದಲ ದಿನವದು. ಬಕೇಟ್ ಹಿಡಿದವನೇ ಅಲ್ಲಿ ಬಾಸು. ನೀಯತ್ತಿಂದ ಕೆಲಸ ಮಾಡುವವನು ಕಾಲಡಿಯ ಕಸ. ಎಲ್ಲರನ್ನೂ ಚೆನ್ನಾಗಿಟ್ಟುಕೊಂಡರೆ ಮಾತ್ರ ಅಲ್ಲಿರಬಹುದು. ಎಲ್ಲರ ಸಹಕಾರವೂ ಇರುತ್ತದೆ. ನೀಯತ್ತು - ನೀತಿ ಎಂದೆಲ್ಲಾ ಒನ್ ಮ್ಯಾನ್ ಆರ್ಮಿ ಆಗಹೊರಟರೆ ನಮಗೇ ಗುಂಡಿ ತೋಡುವ ಜನ! ಎಲ್ಲಾ ಬಿಟ್ಟು ರಿಯಾಲಿಟೀ ಶೋ ಎಂದು ಮಾಡಿ, ಬಹುಮಾನದ ಹಣ ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಊರಿಗೆ ಬಸ್ ಹತ್ತಿಸುವ ಜನಾನೇ ಅಲ್ಲಿರುವವರು. ಎಲ್ಲಾ ತಿಳಿದಾಗ ನಾನು ಅಲ್ಲಿಂದ ಹೊರಬಂದಿದ್ದೆ. ಜಾಬ್ ಆಫರ್ ಕೊಡುತ್ತೇವೆ ಎಂಬ ಆಫರ್ ಬಿಟ್ಟು.

ಮೊನ್ನೆ ಅಡ್ವಾಣಿಯವರ ರಥ ಯಾತ್ರೆಯ ಸಂದರ್ಭದಲ್ಲಿ ಭೂಪಾಲದಲ್ಲಿ ಯಾತ್ರೆಯ ಪ್ರಚಾರಕ್ಕೆ ಬಿಜೆಪಿ ಸಂಸದ ಆಯೋಜಿದ್ದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರಿಗೆ ನೋಟು ನೀಡಿದ ವಿಚಾರ ಕನ್ನಡದ ಯಾವುದೇ ಪತ್ರಿಕೆಗಳಲ್ಲಿ ಒಂದು ಕಾಲಂ ಸುದ್ದಿಯಾಗಿಯೂ ಪ್ರಚಾರವಾಗಲಿಲ್ಲ. ಅದೇ ವರದಿ ಹಿಂದೂ ಪತ್ರಿಕೆಯಲ್ಲಿ ಲೀಡ್ ನ್ಯೂಸ್ ಆಗಿ ಓದಲು ಸಹಕಾರಿಯಾಯ್ತು. ಹಾಗಾದರೆ ಸಾಮಾನ್ಯ ಜನರಿಗೆ ವರದಿ ಮುಟ್ಟಿಸಬೇಕಾದ ಪರ್ತಕರ್ತರು ಮುಚ್ಚಿಹಾಕುವ ಕೆಲಸಕ್ಕಿಳಿದರೆ ಯಾಕೆ ಬೇಕು ಕ್ಷೇತ್ರ?

ಲಂಚಗುಳಿತನ ಪತ್ರಿಕೋದ್ಯಮಕ್ಕೂ ಆವರಿಸಿರುವಾಗ ಅಣ್ಣಾ ಹಜಾರೆಯನ್ನು ಬೆಂಬಲಿಸಿ ಬರೆಯುವ ಯಾವ ನೈತಿಕತೆ ನಮ್ಮಲ್ಲಿದೆ. ರಾಜಾ ಹಗರಣ ಬಯಲಿಗೆಳೆದಂತೆ ನಮ್ಮ ಪ್ರತಿಷ್ಠಿತ 'ಫಿಕ್ಸ್' ಆಗಿರುವ ಪರ್ತಕರ್ತರ ಹಗರಣ ಬಯಲುಗೊಂಡರೆ ಹೇಗಾಗಬಹುದು ನಮ್ಮ ಸ್ಥಿತಿ. ಬಹುಷಃ ರಸ್ತೆ ಮಧ್ಯ ನಿಲ್ಲಿಸಿ ಬೆತ್ತಲು ಜಗತ್ತು ತೋರಿಸಿದಂತಾಗಬಹುದು! ಹಲವು ವರ್ಷಗಳಿಂದ ನಾನು ವಸ್ತು ನಿಷ್ಠ ಸುದ್ದಿ ಪತ್ರಿಕೆ ಎಂದು ಕನ್ನಡದ ಪತ್ರಿಕೆಯೊಂದನ್ನು ಓದುತ್ತಿದ್ದೆ. ಆದರೆ ಪತ್ರಿಕೆಗೆ ಪತ್ರಿಕಾವಲಯದ ಆಪರೇಷನ್ ಕಮಲ ಆದ ನಂತರ ಓದಿ ಓದಿ ಬೇಸತ್ತು ಹೋಗಿತ್ತು. ಮೊನ್ನೆ ಹೋಗಿ ಏಜಂಟನಿಗೆ ಒಂದೇ ಪತ್ರಿಕೆ ಸಾಕು. ಎರಡು ಬೇಡ ಎಂದು ಹೇಳಿ ಬಂದೆ.

ರಾಜಕಾರಣಿ ಹೇಳಿದ್ದನ್ನು ಪರ್ತಕರ್ತ ಕೇಳುವುದಾದರೆ, ಅವರನ್ನು ಕೇಳಿ ಬರೆಯುವುದಾದರೆ ಯಾವ ಕರ್ಮಕ್ಕೆ ಪ್ರೆಸ್ ಕಾರ್ಡ್. ಪರ್ತಕರ್ತರ ಕ್ಷೇಮಾಭಿವೃದ್ಧಿ ಬಗ್ಗೆ ಯೋಚಿಸಬೇಕಾದ ಪ್ರೆಸ್ ಕ್ಲಬ್ ಗಳು ಪರ್ತಕರ್ತನಿಗೆ ಅನ್ಯಾಯವಾಗುವಾಗ ಬಾಯಿ ಮುಚ್ಚಿ ಬಾಗಿಲು ಹಾಕಿಕೊಳ್ಳುವುದಾದರೆ ಯಾಕೆ ಬೇಕು ಕ್ಲಬ್ ಗಳು. ಕೇಳಲು ಪ್ರಶ್ನೆಗಳು ಬಹಳ ಇದೆ. ಆದರೆ ಉತ್ತರಿಸುವ ತಾಕತ್ತು ಯಾರಲ್ಲಿದೆ?

ನನ್ನೂರಿನ ಹತ್ತಿರ ಒಂದು ಪ್ರತಿಷ್ಠಿತ ಖಾಸಗಿ ವಿದ್ಯಾ ಸಂಸ್ಥೆ ಇದೆ. ಸಂಸ್ಥೆಯ ಮುಖ್ಯಸ್ಥ ಮಾಡುತ್ತಿರುವು ಅನಾಚಾರಗಳನ್ನೇ. ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗೆ ಏನೋ ಸಮಸ್ಯೆಯಿಂದ ಕಾಲೇಜು ಬದಲಾಯಿಸಬೇಕಾಗಿ ಬಂದರೆ ಟಿ.ಸಿ ಬೇಕಾದರೆ ಮುಂದಿನ ಎರಡೂ ವರ್ಷಗಳ ಫೀಸು ಭರಿಸಬೇಕು. ಹಾಗಾದರೆ ಮಾತ್ರ ಟಿ.ಸಿ. ಸಿಗುತ್ತದೆ. ಇಲ್ಲದಿದ್ದರೆ ಹಳೆ ಗಂಡನ ಪಾದವೇ ಗತಿ. ಎಷ್ಟೇ ಕಷ್ಟವಾದರೂ ಕೂಡ. ಮಂಗಳೂರಿನ ಎಸ್ಇಝೆಡ್ ಗೆ ಸಂಸ್ಥೆಯ ಮುಖ್ಯಸ್ಥ ಪರವಾಗಿದ್ದಾಗ ಸಂತಸ್ತ ಜನರು ಪತ್ರಿಕಾಗೋಷ್ಠಿ ಆಯೋಸಿದ್ದರು. ನಾನು ಇಂಟರ್ನ್ ಶಿಪ್ ಮಾಡುತ್ತಿದ್ದಾಗಿನ ಘಟನೆ ಅದು. ನಾನು ಅದನ್ನು ವರದಿ ಮಾಡಿ ನನ್ನ ಚೀಫ್ ಗೆ ನೀಡಿದಾಗ ಆತ ಅದನ್ನು ತೆಗೆದು ಕಸದ ಬುಟ್ಟಿಗೆ ಎಸೆದ. ಅವರ ಬಗ್ಗೆ ವರದಿ ಬರಿಬೇಡಿ, ಅದು ನಮ್ಮ 'ಜಾಹಿರಾತು' ಪಾರ್ಟಿ ಎಂಬ ತಾಕೀತು ಬೇರೆ! ಅಷ್ಟೇ ಏಕೆ ಕಾಲೇಜಿನಲ್ಲಿ ದುರ್ಘಟನೆ ನಡೆದ ವರದಿಗಳು ತನನ್ನೇ ಮಾರಿಕೊಂಡ ಪತ್ರಕೆಯಲ್ಲಿ ಇಂದಿಗೂ ...... ಸಮೀಪದ ಖಾಸಗಿ ಕಾಲೇಜು ಎಂಬ ಲೀಡ್ನಲ್ಲಿ ಪ್ರಕಟಗೊಳ್ಳುತ್ತದೆ. ಪತ್ರಿಕೆಯ ಜೊತೆ ಹಾಗೆ ಬರೆಯಲಿಕ್ಕೆ ಅವನಿಗೂ ಜಾಹಿರಾತು ಸಿಗುತ್ತದೆ! ಇದು ವಸ್ತುನಿಷ್ಠ ಪತ್ರಿಕೋದ್ಯಮ!

ಹಾಗಂತ ಪತ್ರಿಕೋದ್ಯಮ ಎಲ್ಲೋ ಕೊಳೆತು ನಾರುತ್ತಿದೆ ಎಂದು ನಾನು ಹೇಳುತ್ತಿಲ್ಲ. ಕೆಲವೊಂದು ಪತ್ರಿಕೆಗಳು ಇಂದಿಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ಪತ್ರಕರ್ತರನ್ನು ದುಡಿಸಿಕೊಳ್ಳುತ್ತಿದೆ. ಅಷ್ಟೇ ಸಂತೃಪ್ತಿಯಿಂದ ಅವರ ಹೊಟ್ಟೆ ತುಂಬಿಸುತ್ತಿದೆ.

ಒಮ್ಮೊಮ್ಮೆ ನನಗೆ ನನ್ನ ಮೇಲೆನೇ ಬೇಜಾರು ಬಂದು ಬಿಡುತ್ತೆ. ಇಷ್ಟೆಲ್ಲಾ ಗೊತ್ತಿದ್ದರೂ ನಾನು ನನ್ನ ಕಿರಿಯ ವಿದ್ಯಾರ್ಥಿಗಳಿಗೆ ಇಂದಿಗೂ ಇಲ್ಲಿ ನೀವು ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂದೆಲ್ಲಾ ಭರವಸೆ ಆಸೆ ಆಂಕಾಂಕ್ಷೆ, ಕನಸುಗಳನ್ನು ತುಂಬುತ್ತಿದ್ದೇನೆ. ನನ್ನ ಕೆಲವೊಂದು ಅನುಭವಗಳನ್ನು ಅವರ ಮುಂದಿಡುತ್ತೇನೆ. ಅವರು ಅದನ್ನು ಚೆನ್ನಾಗಿ ನಂಬಿ ನನ್ನನ್ನೇ ರೋಲ್ ಮಾಡೆಲ್ ಎಂದು ಭಾವಿಸುತ್ತಿದ್ದಾರೆ. ಆದರೆ ಬಾಯಿಯ ಒಳಗಿರುವುದು ಹುಳುಕು ಎಂಬ ಸತ್ಯ ಅವರಿಗೆ ಹೇಳಬೇಕೆಂದು ಮನಸು ಬಯಸುತ್ತೆ. ಕೂಡಲೇ ಸುಮ್ಮನಾಗುತ್ತದೆ.

ನನ್ನದೀಗ ಸ್ನಾತಕೋತ್ತರ ಪದವಿ ಶಿಕ್ಷಣ. ಅದೂ ಪತ್ರಿಕೋದ್ಯಮದಲ್ಲೇ. ಮಳೆ ನಿಂತು ಹೋದ ಮೇಲೆ ಎಂಬಂತೆ ಈಗ ನನಗಾಗಿರುವುದು ಜ್ಞಾನೋದಯಾನೋ ಅಥವಾ ವೈರಾಗ್ಯನೋ ಅಂತ ನನಗೆ ಮಾತ್ರ ಗೊತ್ತಿಲ್ಲ. ಹಾಗಂತ ಇನ್ನೇನೂ ಮಾಡೋಕಾಗಲ್ಲ ಅಂತಾನೂ ಗೊತ್ತು. ಹತ್ತರಲ್ಲಿ ಹನ್ನೊಂದು ಆಗುವ ಸಂದರ್ಭ ಬಂದರೆ ಎಲ್ಲದರಿಂದ ದೂರ ಇದ್ದು ಕ್ಯಾಮರಾ ಹಿಡಿದು ಬದುಕು ಸಾಗಿಸುವ ನಿರ್ಧಾರಕ್ಕೆ ಬಂದಿದ್ಡೇನೆ. ಫ್ರೀಲಾನ್ಸರ್ ಆಗುತ್ತೇನೆ. ಜೊತೆಗೆ ನಾಳೆ ಪಾಠ ಮಾಡುವ ಅವಕಾಶ ಬಂದರೆ ಮತ್ತೆ ನನ್ನ ವಿದ್ಯಾರ್ಥಿಗಳಲ್ಲಿ ಆಸೆಯ ಬೀಜ ಬಿತ್ತುತ್ತೇನೆ. ಎಷ್ಟಾದರೂ ಇದು ಮುಖವಾಡದ ಬದುಕು ಅಲ್ವಾ?

Tuesday 12 April 2011

ನಾವು ಬರುತೇವೆ ನಮ್ಮ ನೆನಪಿರಲಿ...







ಡೆಡಿಕೇಟೆಡ್ ಟೂ ಆಲ್ ಫೈನಲ್ ಇಯರ್ಸ್....
ದ.ರಾ.ಬೇಂದ್ರೆಯವರ ಈ ಕವಿತೆ ಕೇಳಿದಾಕ್ಷಣ ವಿದಾಯದ ಹೊಸ್ತಿಲಲ್ಲಿ ಬೀಳ್ಕೊಡಲು ಸಿದ್ಧರಾಗಿರುವ ಪ್ರತಿಯೊಬ್ಬರ ಕಣ್ಣೂ ತೇವವಾಗುತ್ತದೆ. ವಿದಾಯವೇ ಅಂತಹುದು. ದಾರ್ಶನಿಕವಾಗಿ ಹೇಳುವಂತೆ 3 ದಿನಗಳ ಈ ಜೀವನದಲ್ಲಿ ಪ್ರಯಾಣಿಕರಾಗಿ ಬಂದ ನಾವು ಒಂದಲ್ಲಾ ಒಂದು ದಿನ ವಿದಾಯ ಮಹೋತ್ಸವದ ಪಾತ್ರಧಾರಿಗಳಾಗಿ ಬಿಡುತ್ತೇವೆ. ಗೊತ್ತಿದ್ದೋ.. ಗೊತ್ತಿಲ್ಲದೆಯೋ!
'ವಿದಾಯ' ಪದ ಹೇಳಿದಷ್ಟು ಸುಲಭ ಅಲ್ಲ. ಅಲ್ಲಿ ಭಾರವಾದ ಒಲ್ಲದ ಮನಸ್ಸಿನಿಂದ ಮುಂದಿನ ಪ್ರಯಾಣಕ್ಕೆ ಸಿದ್ಧವಾಗಬೇಕು ಅನ್ನಿಸುವುದು ಕಾಲೇಜು ದಿನಗಳು ಮುಗಿಯುವಾಗ. ಅದು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಮುಗಿಯುವಾಗ ಮತ್ತೂ ಕಾಡುತ್ತದೆ. ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಪದವಿ ನಂತರ ಶೈಕ್ಷಣಿಕ ಜೀವನಕ್ಕೆ ಇತಿಶ್ರೀ ಹಾಡುತ್ತಾರೆ. ಕಾರಣಗಳು ನೂರೆಂಟು. ಸ್ನಾತಕೋತ್ತರ ಶಿಕ್ಷಣ ಶಾಸ್ತ್ರೀಯ ಶಿಕ್ಷಣ ವ್ಯವಸ್ಥೆಯ ಕೊನೆಯ ಘಟ್ಟವಾದ್ದರಿಂದ ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬ ಮಾತು ಮನದಾಳಕ್ಕೆ ತಟ್ಟಿರುತ್ತದೆ. ಹಾಗಾಗಿ ಹೋಗಬೇಕಾ ಎಂದೆನಿಸುತ್ತದೆ.
ಹೋಗುವ ಸಂದರ್ಭ ಕಳೆದ ನೆನಪುಗಳು ಮತ್ತೂ ಕಾಡುತ್ತದೆ. ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿ ಕಾಲೇಜಿಗೆ ಕಾಲಿಟ್ಟಾಗ ಇಲ್ಲಿ 3 ಅಥವಾ ಎರಡು ವರ್ಷ ಹೇಗೆ ಕಳೆಯುವುದು ಎಂದು ಗಂಟು ಮೊಗ ಹಾಕಿ ಪ್ರವೇಶಿಸಿದ್ದರೂ ಕೆಲವೇ ದಿನಗಳಲ್ಲಿ ಆ ವಾತಾವರಣದೊಳಗೆ ನಾವು ಒಬ್ಬರಾಗಿ ಬಿಡುತ್ತೇವೆ. ಕಾರಿಡಾರಿನಲ್ಲಿ ಅಡ್ಡಾಡುವಾಗ ಪ್ರಾರಂಭದಲ್ಲಿ ಒಬ್ಬರ ಮುಖ ಒಬ್ಬರು ದಿಟ್ಟಿಸಿ ನೋಡುತ್ತಿದ್ದರೂ ನಗುವಿಗೆ ಬಿಗುವಿನ ವಾತಾವರಣ. ಕಾಲಚಕ್ರ ಉರುಳಿದಂತೆ ಮುಖ ಇಷ್ಟುದ್ದ ಅರಳುತ್ತದೆ. ಮತ್ತೆ ಹಾಯ್ - ಬಾಯ್, ಮಾತುಕತೆ. ಗೊತ್ತಿಲ್ಲದ ಆತ್ಮೀಯತೆ ಸ್ನೇಹವೊಂದು ನಮ್ಮನ್ನು ಆವರಿಸಿಬಿಡುತ್ತದೆ. ಒಂದು ದಿನ ಪರಸ್ಪರ ಭೇಟಿಯಾಗದಿದ್ದರೂ ಅದೇನೋ ಕಳಕೊಂಡ ಭಾವ. ಹುಟ್ಟುಹಬ್ಬ - ಖುಷಿಯ ದಿನಗಳನ್ನು ಗೆಳೆಯರ ಜೊತೆ ಆಚರಿಸಿಕೊಂಡ ಕ್ಷಣಗಳೆಷ್ಟು ಮಧುರ. ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಮನೆಯವರನ್ನೂ ನಾವಷ್ಟು ಹಚ್ಚಿಕೊಂಡಿರುವುದಿಲ್ಲ!
ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ವಿದ್ಯಾದೇಗುಲದ ಜೊತೆಗೆ ಪ್ರೇಮ ಕಾಶ್ಮೀರ. ಹಲವರ ಮನದಾಳದಲ್ಲಿ ಅಡಗಿದ್ದ ಕನಸಿನ ಜೀವನಯಾತ್ರೆಗೆ ಸಹಪ್ರಯಾಣಿಕರು ಸಿಕ್ಕ ಖುಷಿ. ಹಲವರಿಗೆ ಕಾರಿಡಾರು ಲವ್ ಅಟ್ ಫಸ್ಟ್ ಸೈಟ್. ಜೋಕೊಂದು ನೆನಪಾಗುತ್ತಿದೆ. ಕಾಲೇಜು ಜೀವನದಲ್ಲಿ 100 ಶೇಕಡಾ ಅಟೆಂಡೆನ್ಸ್ ಉಳಿಸಿಕೊಳ್ಳೋದು ಹೇಗೆ. ಉತ್ತರ ಸಿಂಪಲ್. ತಾನು ಕಲಿಯುತ್ತಿರುವ ಕಾಲೇಜಿನಲ್ಲೇ ತನ್ನ ಪ್ರಿಯತಮೆಯೂ ಇರಬೇಕಂತೆ. ವಾಟ್ ಆನ್ ಐಡಿಯಾ ಸರ್ಜೀ...! ಇದೆಲ್ಲದರ ಮಧ್ಯೆ ಅಟೆಂಡೆನ್ಸ್ ಶಾರ್ಟೇಜ್ ಗೋಳು. ಬಂಕ್ ಹೊಡೆದು ಸುತ್ತಾಡಿದ ಖುಷಿ ಹಾಲ್ ಟಿಕೇಟ್ ಪಡೆವಾಗ ದಂಡ ಕಟ್ಟಿಸಿಕೊಂಡು ಕಕ್ಕಿರುತ್ತದೆ!
ಟ್ರೆಡೀಷನಲ್ ಡೇ ಎಂದು ಮದುವೆ ಮನೆಗೆ ಹೋದ ಹಾಗೆ ಲುಂಗಿ - ಸೀರೆ ಉಟ್ಟುಕೊಂಡು ಕಾಲೇಜಿಗೆ ಹೋಗಿದ್ದು, ಅದೇಕೋ ಆ ಹುಡುಗ/ಹುಡುಗಿ ಕನಸಿನಲ್ಲಿ ಬಂದು ಕಾಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಸಿದ್ದು, ವೇದಿಕೆ ಹತ್ತದವರೂ ಜೀವನದಲ್ಲಿ ಮೊದಲ ಬಾರಿಗೆ ವೇದಿಕೆ ಹತ್ತಿ ಮಾತಾಡಿದ್ದು, ಮುನಿಸು - ಜಗಳ, ವೀಕೆಂಡ್ ಮಸ್ತಿ, ಸ್ಪೆಷಲ್ ಕ್ಲಾಸ್ ನೆಪ, ಸಾಧಿಸಿದ ಮೈಲಿಗಲ್ಲು, ಕೊನೆಯದಾಗಿ ತೆಗೆಸಿಕೊಂಡ ಗ್ರೂಫ್ ಫೊಟೋ. ನೆನಪುಗಳ ಮೆರವಣಿಗೆ ಮಾಡಿಸಹೊರಟರೆ ಅದು ಗಿನ್ನಿಸ್ ದಾಖಲೆಗೆ ಸೇರಬಹುದು. ಅಷ್ಟು ಸವಿ ಸವಿ ನೆನಪುಗಳು ಇಲ್ಲಿವೆ. ಮೈ ಆಟೋಗ್ರಾಫ್ ಚಿತ್ರದ ಸವಿ ಸವಿ ನೆನಪು ಸಾವಿರ ನೆನಪು, ಸಾವಿರ ಕಾಲಕು ಸವಿಯೋ ನೆನಪು ಹಾಡು ಅನುಭವಕ್ಕೆ ಬರುವುದು ಇಂತಹ ಸಂದರ್ಭದಲ್ಲೇ. ಲೈಫು ಇಷ್ಟೇನೆ, ಲೈಫು ಹಿಂಗೇನೇ ಎಂದೆನಿಸುವುದು ಈಗ.
ಕಿರಿಯ ತರಗತಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಿದಾಯ ಕೂಟ ಇಷ್ಟೆಲ್ಲಾ ನೆನಪಿಗೆ ತಂತು. ಎಲ್ಲೋ ಓದಿದ ನೆನಪು. ಅಪರಿಚಿತರಾಗಿ ಸೇರಿ, ಪರಿಚಿತರಾಗಿ ಅಗಲುವಾಗ, ಪ್ರತಿಯೊಬ್ಬರೂ ಪರಸ್ಪರರಿಗೆ ಕೊಡುವ ಮರೆಯಲಾಗದ ಕಾಣಿಕೆ, ಅದೇ ನೆನಪು. ಈ ಜಗದಲ್ಲಿ ನೆನಪೊಂದೇ ಶಾಶ್ವತ. ಎಷ್ಟು ಅರ್ಥಗರ್ಭಿತ ಅಲ್ವಾ?

Thursday 2 December 2010

ಸ್ವಾಮಿಯೇ ಶರಣಂ ಅಯ್ಯಪ್ಪ

ಇದು ಸಮಾನತೆಯ ಭಕ್ತಿ ಕ್ರಾಂತಿ!

ನವೆಂಬರ್ - ಡಿಸೆಂಬರ್ ತಿಂಗಳು ಬಂದರೆ ಸಾಕು ಅಯ್ಯಪ್ಪ ಸ್ವಾಮಿ ಸೀಸನ್ ಶುರುವಾಗುತ್ತದೆ. ಅಯ್ಯಪ್ಪ ಸ್ವಾಮಿ ವೃತಧಾರಿಗಳು ಹೆಚ್ಚಾಗಿ ಕಂಡು ಬರುವ ಸಮಯವೂ ಇದೇ. ಜಾತಿ - ಧರ್ಮ, ಮೇಲ್ವರ್ಗ - ಕೆಳವರ್ಗ ಎಲ್ಲಾ ಪೊರೆಗಳನ್ನು ಕಳಚಿಟ್ಟು ಎಲ್ಲರೂ ಸ್ವಾಮಿಗಳಾಗುವ ಸಮಾನತೆಯ ಭಕ್ತಿ ಕ್ರಾಂತಿ ಒಂದಿದ್ದರೆ ಅದು ಅಯ್ಯಪ್ಪ ಸ್ವಾಮಿ ವೃತ ಮಾತ್ರ!

ಅಯ್ಯಪ್ಪ ಸ್ವಾಮಿ ವೃತಧಾರಿಯಾಗುವುದು ಅಷ್ಟು ಸುಲಭದ ಮಾತಲ್ಲ. ತಾನು ವೃತ ಪಾಲಿಸುತ್ತೇನೆ ಎಂದು ಹೊರಟವನಿಗೆ ತನ್ನನ್ನು ತಾನು ನಿಗ್ರಹಿಸಿಕೊಳ್ಳುವ ಶಕ್ತಿ ಇರಬೇಕು. ಒಂದರ್ಥದಲ್ಲಿ ಇದು ಸನ್ಯಾಸತ್ವ ಸ್ವೀಕರಿಸಿದಂತೆಯೇ ಸರಿ. 41 ದಿನಗಳ ಕಾಲ ಕಪ್ಪು ಅಥವಾ ಕೇಸರಿ ಪಂಚೆ, ಅದೇ ಬಣ್ಣದ ಶಲ್ಯ - ಅಂಗಿ ಮಾತ್ರ ಧರಿಸಬೇಕು. ಕಾಲಿಗೆ ಚಪ್ಪಲಿ ಇಲ್ಲದೇ ಅಡ್ಡಾಡಬೇಕು. ಬೆಳಗ್ಗೆ ಎದ್ದು ತಣ್ಣಿರಿನಲ್ಲೇ ಸ್ನಾನ ಮಾಡಬೇಕು. ಸಸ್ಯಾಹಾರ ಮಾತ್ರ ಸೇವಿಸಬೇಕು. ಜೊತೆಗೆ ಅಯ್ಯಪ್ಪ ಭಜನೆ ಮಾಡಬೇಕು. ಚಾಪೆಯ ಮೇಲೆ ಮಾತ್ರ ಮಲಗಬಹುದು. ವಂಚನೆ - ಮೋಸಗಳಲ್ಲಿ ತೊಡಗಿದರೆ ವೃತ ಪೂರ್ಣವಾಗುವುದಿಲ್ಲ.

ಹಲವರು ವೃತ ಪಾಲನೆಯಲ್ಲೂ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುತ್ತಾರೆ. ಒಂದು ವಾರ, ಮೂರು ದಿನ ಮೊದಲು ವೃತ ಪಾಲಿಸುವವರಿದ್ದಾರೆ. ಇನ್ನು ಕೆಲವರು ಹೊರಡುವ ದಿನ ಮಾಲೆ ಹಾಕುತ್ತಾರೆ. ಅದೂ ಸಾಧ್ಯವಾಗದವರು ಶಬರಿಮಲೆ ಬೆಟ್ಟ ಹತ್ತುವ ಮೊದಲು ಮಾಲೆ ಹಾಕುತ್ತಾರೆ.

ಅಯ್ಯಪ್ಪ ವೃತ ಧಾರಿಗಳು ವೃತ ಪಾಲಿಸಲು ಶುರು ಮಾಡಿದ ದಿನದಿಂದ ಮನೆಯಿಂದ ದೂರ ಇರುತ್ತಾರೆ. ವೃತಧಾರಿಗಳೆಲ್ಲಾ ಸೇರಿ ಒಂದು ಕ್ಯಾಂಪ್ ಮಾಡುತ್ತಾರೆ. ಅವರ ದೈನಂದಿನ ಪೂಜಾ ದಿನಚರಿ ಎಲ್ಲವೂ ಅಲ್ಲೇ ನಡೆಯುತ್ತದೆ. ಪ್ರತೀ ಕ್ಯಾಂಪ್ ಗೆ ಒಬ್ಬ ಗುರುಸ್ವಾಮಿ ಇರುತ್ತಾರೆ. 18 ಬಾರಿ ಶಬರಿಮಲೆ ಯಾತ್ರೆ ಕೈಗೊಂಡವರನ್ನು ಗುರುಸ್ವಾಮಿ ಎಂದು ಕರೆಯಲಾಗುತ್ತದೆ. ಗುರುಸ್ವಾಮಿಗಳು ಉಳಿದ ವೃತಧಾರಿಗಳಿಗೆ ಮಾರ್ಗದರ್ಶಕರು.

ಕ್ಯಾಂಪ್ ನಲ್ಲಿ ಅವರಿಗೆ ಬೇಕಾದ ಅನ್ನ ಆಹಾರಗಳನ್ನು ಅವರೇ ತಯಾರಿಸಿಕೊಳ್ಳುತ್ತಾರೆ. ಪರಸ್ಪರರನ್ನು ಸ್ವಾಮಿ ಎಂದೇ ಸಂಭೋದಿಸಿ ಮಾತನಾಡುತ್ತಾರೆ. ಅಯ್ಯಪ್ಪ ಸ್ವಾಮಿ ವೃತಧಾರಿಗಳಾಗುವ ಅವಕಾಶ ಎಲ್ಲರಿಗೂ ಇಲ್ಲ. ಪುರುಷರೆಲ್ಲರಿಗೂ ಇದು ಮುಕ್ತ. ಮೈ ನೆರೆಯದ ಬಾಲಕಿಯರು, ಋತುಚಕ್ರ ನಿಂತ ಹೆಂಗಸರು ಮಾತ್ರ ಅಯ್ಯಪ್ಪ ಸ್ವಾಮಿ ವೃತ ಪಾಲಿಸಬಹುದು. 41 ದಿನಗಳ ವೃತದ ನಂತರ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ದೇವರ ಸ್ವಂತ ನಾಡು ಕೇರಳದ ಶಬರಿಮಲೆಗೆ ಪ್ರಯಾಣ ಬೆಳೆಸುತ್ತಾರೆ. ಅವರ ತಲೆಯಲ್ಲಿ ಇರುಮುಡಿ ಇರುತ್ತದೆ. ಇರುಮುಡಿ ಎಂದರೆ ಎರಡು ಚೀಲಗಳು. ಅದರಲ್ಲಿ ಪೂಜಾ ಸಾಮಾಗ್ರಿ, ಅಕ್ಕಿ, ತೆಂಗಿನ ಕಾಯಿ, ತುಪ್ಪ ಇರುತ್ತದೆ.

ಶಬರಿಮಲೆ ಇರುವುದು ಪಟ್ಟನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳ ಬೆಟ್ಟಗಳ ನಡುವೆ. ಕೇರಳ ಮಾಸದ ಮೊದಲ ಐದು ದಿನ ದೇವಾಲಯ ತೆರೆದಿರುತ್ತದೆ. ಉಳಿದಂತೆ ಶಬರಿಮಲೆ ದೇವಾಲಯ ತೆರೆದಿರುವುದು ನವೆಂಬರ್, ಡಿಸೆಂಬರ್ ಜನವರಿಯಲ್ಲಿ. ದೇವಾಲಯದ ಕೊನೆಯ 18 ಮೆಟ್ಟಿಲುಗಳನ್ನು ಏರಬೇಕಾದರೆ ಇರುಮುಡಿ ಇರಲೇ ಬೇಕು. ಜನವರಿ 14 ಸಂಜೆ ಮಕರ ಜ್ಯೋತಿ ದರ್ಶನವಾಗುವುದರೊಂದಿಗೆ ಅಯ್ಯಪ್ಪ ವೃಟ್ ಕೊನೆಗೊಳ್ಳುತ್ತದೆ. ಮಕರ ಜ್ಯೋತಿ ದರ್ಶನವೇ ಅಯ್ಯಪ್ಪ ಸ್ವಾಮಿ ವೃತದ ಮುಖ್ಯ ಘಟ್ಟ. ಹಾಗಾಗಿ ಹೆಚ್ಚಿನವರು ಕೊನೆಗೇ ದರ್ಶನಕ್ಕೆ ತೆರಳುವುದು. ಅಂದು ಶಬರಿಮಲೆಯಲ್ಲಿ ದರ್ಶನಕ್ಕೆ ನೂಕು ನುಗ್ಗಲೂ ಇರುತ್ತದೆ.

ಶಬರಿಮಲೆ ಸೀಸನ್ ನಲ್ಲಿ ಕೇರಳ ರಾಜ್ಯದ ಆಡಳಿತದಲ್ಲೂ ಹಲವಾರು ಮಾರ್ಪಾಡುಗಳಾಗಿರುತ್ತದೆ. ಎಲ್ಲಾ ಗಡಿ ಭಾಗಗಳಲ್ಲೂ ಶಬರಿಮಲೆಗೆ ಹೆಚ್ಚಿನ ಭಕ್ತರು ಬರುವುದರಿಂದ ವಿಶೇಷ ಆರ್ ಟಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುತ್ತದೆ. ದರ್ಶನ ಪ್ರಾರಂಭವಾದಂತೆ ದೇಶದ ಎಲ್ಲಾ ಭಾಗಗಳಿಂದ ಶಬರಿಮಲೆಗೆ ವಿಶೇಷ ರೈಲು, ಬಸ್ ಸಂಚಾರ ಪ್ರಾರಂಭವಾಗುತ್ತದೆ. ಕೊಚ್ಚಿ ತಿರುವನಂತರಪುರಂಗಳಿಗೆ ಬರುವ ವಿಮಾನಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ವಿಶ್ವದ ಅನೇಕ ಭಾಗಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರು ಇಲ್ಲಿಗಾಗಮಿಸುತ್ತಾರೆ. ಒಂದು ಅಂದಾಜಿನ ಪ್ರಕಾರ ವರ್ಷಂಪ್ರತೀ 4.5 ರಿಂದ 5 ಕೋಟಿ ಭಕ್ತರು ಶಬರಿಮಲೆಗೆ ಬರುತ್ತಾರೆ. ಮಕ್ಕಾದ ಹಜ್ ಯಾತ್ರೆ ಬಿಟ್ಟರೆ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತ ಸಮೂಹ ಭೇಟಿ ನೀಡುವುದು ಶಬರಿಮಲೆಗೆ ಮಾತ್ರ. ಹಾಗಾಗಿ ಯಾತ್ರಾರ್ಥಿಗಳನ್ನು ಆಕರ್ಷಿಸುವುರದಲ್ಲಿ ಶಬರಿಮಲೆ ಎರಡನೇ ಸ್ಥಾನದಲ್ಲಿದೆ.

ಶಬರಿಮಲೆಗೆ ಹೋಗುವುದರಲ್ಲೂ ವೈವಿಧ್ಯತೆ. ವಾಹನ ಮಾಡಿಕೊಂಡು ಜೊತೆಯಾಗಿ ಹೋಗುವವರಿದ್ದಾರೆ. ಗುರುಸ್ವಾಮಿಗಳೊಂದಿಗೆ ರೈಲಿನಲ್ಲಿ ತೆರಳುವವರಿದ್ದಾರೆ. ಇನ್ನು ಕೆಲವರು ಪಾದಯಾತ್ರೆಯಲ್ಲೇ ಶಬರಿಮಲೆ ತಲುಪುತ್ತಾರೆ. ಶಬರಿಮಲೆ ಸೀಸನ್ ನಲ್ಲಿ ಕೇರಳಕ್ಕೆ ಹೋದರೆ ಪಾದಯಾತ್ರೆಯಲ್ಲೇ ಸಾಗುವವರನ್ನು ಕಾಣಬಹುದು. ಸುಡುಬಿಸಿಲಿನಲ್ಲಿ ಅವರ ನಡಿಗೆ ನೋಡಿದರೆ ಎಂಥಹವರ ಮನವೂ ಕರಗುತ್ತದೆ.

ಅಯ್ಯಪ್ಪ ಸ್ವಾಮಿ ವೃತಧಾರಿಗಳನ್ನು ನೋಡುವಾಗ ಭಕ್ತಿಗಿಂತಲೂ ಹೆಚ್ಚಾಗಿ ಇದೊಂದು ಸಾಮಾಜಿಕ ಕ್ರಾಂತಿಯಂತೆ ಕಾಣುತ್ತದೆ. ಇಲ್ಲಿ ಯಾವುದೇ ಜಾತಿ ಇಲ್ಲ. ಎಲ್ಲರೂ ಜೊತೆಯಾಗಿಯೇ ಕೂತು ಊಟ ಮಾಡುವುದು, ಒಂದೇ ಕ್ಯಾಂಪ್ ನಲ್ಲಿ ಇರುವುದು ನೋಡಿದರೆ ಇದೊಂದು ಸಕಾರಾತ್ಮಕ ಬೆಳವಣಿಗೆಯಂತೆ ಕಂಡು ಬರುತ್ತದೆ. ಜಾತಿಯ ಪೊರೆ ಕಳಚಲು ಇಂತಹ ಆಚರಣೆಗಳಿಂದ ಮಾತ್ರ ಸಾಧ್ಯವೇನೋ!